ಕಾರ್ಕಳ: ಮಿಯ್ಯಾರು ಕುಂಟಿಬೈಲ್ನ ಬಿಲ್ಡರ್ ಕಿಡ್ನಾಪ್ಗೆ ಸ್ಕೆಚ್ ಹಾಕಿದ ನಾಲ್ವರು ಆರೋಪಿಗಳನ್ನು ಎಎಸ್ಪಿ ವೆಂಕಟೇಶ್ವರಪ್ಪ ನೇತೃತ್ವದ ಪೊಲೀಸ್ ತಂಡ ನಗರದ ಕರಿಯಕಲ್ಲು ಎಂಬಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಬಂಧಿಸಿದೆ.
ನಿಟ್ಟೆಯ ಧರ್ಮ ಅಲಿಯಾಸ್ ಧನು ಅಲಿಯಾಸ್ ಧರ್ಮೇಂದ್ರ, ಪಳ್ಳಿಯ ಭರತ್ ಶೆಟ್ಟಿ, ಪಳ್ಳಿಯ ಪ್ರಶಾಂತ್ ಶೆಟ್ಟಿ, ರೆಂಜಾಳದ ಉಮ್ಮರ್ ಬಂಧಿತ ಆರೋಪಿಗಳು. ಇವರೆಲ್ಲರೂ ಮಿಯ್ಯಾರ್ ಕುಂಟಿ ಬೈಲ್ನ ಕೊಂಕಣ್ ಸಂಸ್ಥೆಯ ಬಿಲ್ಡರ್ ಲಿಯೋ ಪಿರೇರಾ ಎಂಬವರ ಕಿಡ್ನಾಪ್ಗೆ ಎರಡನೇ ಬಾರಿ ಸ್ಕೆಚ್ ಹಾಕಿ ವಿಫಲಗೊಂಡವರು.
ಕಳೆದ ಹದಿನೈದು ದಿನಗಳಿಂದ ಅದರಲ್ಲೂ ರಾತ್ರಿ ವೇಳೆಯಲ್ಲಿ ಲಿಯೋ ಅವರ ಮೊಬೈಲಿಗೆ ಕರೆಮಾಡುತ್ತಿದ್ದ ಆರೋಪಿಗಳು ‘ನಿಮ್ಮನ್ನು ಈ ಬಾರಿ ಮತ್ತೊಮ್ಮೆ ಕಿಡ್ನಾಪ್ ಮಾಡಲು ಹೊಂಚು ಹಾಕಿದ್ದೇವೆ, ಈ ಬಾರಿ ಪೊಲೀಸರಿಗೆ ಮಾಹಿತಿ ನೀಡಿದರೆ ಹೆಣವಾಗಿ ಹೋಗುವುದಂತೂ ಗ್ಯಾರಂಟಿ. ೧೦ ಲಕ್ಷ ರೂ. ಒತ್ತೆ ಹಣ ವನ್ನು ತಲುಪಿಸಿ ಇಲ್ಲದೆ ಹೋದರೆ ಪರಿಸ್ಥಿತಿ ಎದುರಿಸಿ’ ಎಂದು ಜೀವ ಬೆದರಿಕೆಯನ್ನು ಹಾಕಿದ್ದರು. ಘಟನೆಯ ಕುರಿತು ಲಿಯೋ ಅವರು ಐಜಿಯವರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾದ ಪೊಲೀಸರು ನಿನ್ನೆ ನಗರದ ಕರಿಯಕಲ್ಲು ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂವರನ್ನು ಹಾಗೂ ಮತ್ತೊಬ್ಬನನ್ನು ರೆಂಜಾಳದಲ್ಲಿ ಬಂಧಿಸಿದ್ದಾರೆ.
ಹಿಂದೊಮ್ಮೆ ಅಪಹರಣವಾಗಿದ್ದ ಬಿಲ್ಡರ್
ಲಿಯೋ ಅವರು ೨೦೧೦ ಮಾರ್ಚ್ ೨೨ರಂದು ಅಪಹರಣಕ್ಕೀಡಾಗಿದ್ದರು. ಅಂದು ಉದ್ಯಮಿಯ ಸಹೋದರ ಬೊನವೆಂತರ್ ಪಿರೇರಾ ಅವರು ಅಂದು ನಗರ ಠಾಣೆಗೆ ನಾಪತ್ತೆ ದೂರು ಸಲ್ಲಿಸಿದ್ದರು. ಮರುದಿನ ಮುಂಜಾನೆ ವೇಳೆಯಲ್ಲಿ ಪ್ರಕರಣ ಹೊಸ ತಿರುವನ್ನು ಪಡೆದಿತ್ತಲ್ಲದೇ ಪತ್ನಿ ಐಡಾ ಪಿರೇರಾ ಅವರು ಪೊಲೀಸರಿಗೆ ದೂರು ನೀಡಿ, ಆರೋಪಿಗಳ ತಂಡವೊಂದು ಗಂಡನ ಬಿಡುಗಡೆಗೆ ೨೫ ಲಕ್ಷ ರೂಪಾಯಿ ಬೇಡಿಕೆ ಸಲ್ಲಿಸಿದೆ ಎಂದು ತಿಳಿಸಿದ್ದರು. ಆನಂತರ ಆರೋಪಿಗಳೊಂದಿಗೆ ಉದ್ಯ ಮಿಯ ಮನೆ ಮಂದಿ ಒಳ ಒಪ್ಪಂದ ಮಾಡಿದರಲ್ಲದೇ ಉಡುಪಿ ಕಡೆಗೆ ಹೋಗುವ ಬಸ್ಸು ನಿಲ್ದಾಣಕ್ಕೆ ಬಂದಿದ್ದ ಆರೋಪಿಗಳ ಸಹಚರರಿಗೆ ೨೦ ಲಕ್ಷ ರೂಪಾಯಿ ಒತ್ತೆ ಹಣ ನೀಡಿದ್ದರು. ಒತ್ತೆಹಣ ಹಿಡಿದುಕೊಂಡು ವಾಹನ ವೇರಿದ್ದ ಆರೋಪಿಗಳು ಕಾಬೆಟ್ಟು ಪರಿಸರ ಕಡೆಗೆ ಹೋದ ಮರುದಿನ ಮುಂಜಾನೆ ಲಿಯೋನನ್ನು ಆರೋಪಿ ಗಳು ಬಂಧ ಮುಕ್ತಗೊಳಿಸಿದ್ದರು.
ಜಾಗ ವ್ಯವಹಾರವೊಂದರ ಮಾತು ಕತೆಗೆಂದು ಕರೆದ ದುಷ್ಕರ್ಮಿಗಳು ಲಿಯೋ ಅವರನ್ನು ಅವರ ಕಾರಿ ನಲ್ಲಿಯೇ ಕಿಡ್ನಾಪ್ ಮಾಡಿ ಶಿವಮೊ ಗ್ಗದ ಭದ್ರಾವತಿಯ ಮನೆಯೊಂದರಲ್ಲಿ ಕೂಡಿ ಹಾಕಿ ನಂತರವಷ್ಟೇ ೨೫ ಲಕ್ಷ ರೂಪಾಯಿ ಒತ್ತೆಹಣಕ್ಕೆ ಬೇಡಿಕೆ ಮುಂದಿಟ್ಟಿದ್ದರು. ಮನೆ ಮಂದಿ ಯೊಂದಿಗೆ ನಡೆಸಿದ ಮಾತುಕತೆಯ ಬಳಿಕವಷ್ಟೇ ಒತ್ತೆಹಣ ೨೦ ಲಕ್ಷ ರೂಪಾಯಿಗೆ ಇಳಿಸಿದ ದುಷ್ಕರ್ಮಿಗಳು ಯಾವುದೇ ಕಾರಣಕ್ಕೂ ಒತ್ತೆಹಣ ನೀಡುವ ನೆಪದಲ್ಲಿ ನಮ್ಮ ಸದಸ್ಯರನ್ನು ಪೊಲೀಸರಿಗೊಪ್ಪಿಸಿದ್ದಲ್ಲಿ ಲಿಯೋ ಹೆಣವಾಗುತ್ತಾನೆಂದು ಎಚ್ಚರಿಸಿದ್ದರು. ಆದುದರಿಂದಲೇ ಪೊಲೀಸರಿಗೂ ತಿಳಿಯದ ರೀತಿಯಲ್ಲಿ ೨೦ ಲಕ್ಷ ರೂಪಾಯಿ ಒತ್ತೆಹಣವನ್ನು ಮನೆ ಮಂದಿ ನೀಡಿದ್ದರು.
ಅಂದಿನ ಠಾಣಾಧಿಕಾರಿ ರಾಮ ಚಂದ್ರ ನಾಯಕ್ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದ ೧೧ ಮಂದಿಯಲ್ಲಿ ಒಂಭತ್ತು ಮಂದಿ ಆರೋಪಿಗಳನ್ನು ಮಾತ್ರ ಬಂಧಿಸಿದ್ದರು. ನಿಟ್ಟೆ ಕೆಮ್ಮಣ್ಣಿನ ಜಯ ಸುವರ್ಣ, ಆತನ ಸಹೋದರ ಪ್ರದೀಪ್ ಸುವರ್ಣ, ಬೈಲೂರಿನ ಸುರೇಶ್ ಸಾಲ್ಯಾನ್, ರೆಂಜಾಳದ ಸತೀಶ್ ಪೂಜಾರಿ, ಸುಳ್ಯ ಮೂಡುಬೆಳ್ಳಾರೆಯ ರಂಗನಾಥ ರೈ, ರೆಂಜಾಳದ ಉಮ್ಮರ್, ಮಾಮಂಜೂರಿನ ಅನಿಶ್ ಶೆಟ್ಟಿ, ಆರೋಪಿಗಳಿಗೆ ಭದ್ರಾವತಿಯಲ್ಲಿ ಆಶ್ರಯ ನೀಡಿದ ಭದ್ರಾವತಿಯ ಸಂತೋಷ್, ಸುರೇಶ್ ಎಂಬವರು ಅಂದು ಬಂಧಿತರಾದವರು. ಅವರಲ್ಲಿದ್ದ ಒತ್ತೆಹಣ ೧೨ಲಕ್ಷ ರೂಪಾಯಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಪಳ್ಳಿಯ ಭರತ್ ಶೆಟ್ಟಿ ಹಾಗೂ ನಿಟ್ಟೆಯ ಧರ್ಮ ಅಲಿಯಾಸ್ ಧಮೇಂದ್ರ ಅಲಿಯಾಸ್ ಧನು ಎಂಬವರು ಎಂಟು ಲಕ್ಷ ರೂಪಾಯಿಯೊಂದಿಗೆ ಮುಂಬಯಿಗೆ ಪರಾರಿ ಯಾಗಿದ್ದರು. ಪ್ರಕರಣಕ್ಕೆ ಒಂದು ವರ್ಷ ಆಗುತ್ತಿದ್ದಂತೆ ತಮ್ಮಲ್ಲಿದ್ದ ಒತ್ತೆಹಣವೆಲ್ಲ ಮುಗಿಯುತ್ತಾ ಬಂತು. ಮುಂದಿನ ಬದುಕಿಗಾಗಿ ಹಾಗೂ ಪ್ರಕರಣದ ಜಾಮೀನಿಗಾಗಿ ಹಣದ ಅಗತ್ಯತೆ ಆರೋಪಿಗಳಿಗೆ ಇದ್ದುದರಿಂದ ಮತ್ತೆ ಉದ್ಯಮಿ ಕಿಡ್ನಾಪ್ಗೆ ಮುಂದಾಗಿದ್ದಾರೆ. ಅದಕ್ಕಾಗಿ ಆಯ್ಕೆಮಾಡಿಕೊಂಡದ್ದು ಅದೇ ಲಿಯೋ ಪಿರೇರಾರನ್ನು. ಎರಡನೇ ಬಾರಿಗೆ ಕಿಡ್ನಾಪ್ಗೆ ಸ್ಕೆಚ್ ಹಾಕಿ ವಿಫಲವಾದ ಆರೋಪಿಗಳೆಲ್ಲ ಪೊಲೀಸರ ಬಲೆಗೆ ಸಿಕ್ಕುಬಿದ್ದಿದ್ದಾರೆ.
ಲಿಯೋ ಪಿರೇರಾರನ್ನು ಮೊದಲ ಬಾರಿಗೆ ಕಿಡ್ನಾಪ್ ಮಾಡಿ ಎಂಟು ತಿಂಗಳ ಕಾಲ ಜೈಲುವಾಸ ಕಂಡು ಜಾಮೀನು ಮೇರೆಗೆ ಬಿಡುಗಡೆಗೊಂಡಿದ್ದ ಉಮ್ಮರ್ ರೆಂಜಾಳ ಎಂಬಾತ ಈ ಪ್ರಕರಣದ ಪ್ರಮುಖ ಸೂತ್ರಧಾರನೆಂದು ತಿಳಿದುಬಂದಿದೆ.
ಎಎಸ್ಪಿ ವೆಂಕಟೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ಇನ್ಸ್ಸೆಕ್ಟರ್ ಗಣೇಶ್ ಹೆಗ್ಡೆ, ಕಾರ್ಕಳ ಇನ್ಸ್ಪೆಕ್ಟರ್ ಪುಟ್ಟೇಸ್ವಾಮಿಗೌಡ ಅವರ ಮಾರ್ಗದರ್ಶನದಲ್ಲಿ ನಗರ ಠಾಣಾಧಿಕಾರಿ ಪಿ.ಪ್ರಮೋದ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


0 ಕಾಮೆಂಟ್(ಗಳು)